ಶ್ರೀ ಕೊರಗಜ್ಜ ದೈವಸ್ಥಾನ‌, ಮಂಜಿಕೆರೆ; ಸುಂಟಿಕೊಪ್ಪ

ದೈವಸ್ಥಾನದ ಬಗ್ಗೆ


ಸರಿ ಸುಮಾರು 55 ವರ್ಷಗಳ ಹಿಂದೆ ತುಳುನಾಡಿನ ಪುತ್ತೂರಿನ ಬಳಿಯ ಕೌಡಿಚಾರ್‌ ಪಡುಮಲೆ ಮೂಲದಿಂದ ಕೊಡಗಿಗೆ ಕೃಷಿ ಕಾರ್ಮಿಕರಾಗಿ ಬಂದ ಮೋಗೇರ ಜನಾಂಗದ ಕರಿಯ ಎಂಬುವವರು ಕುಶಾಲನಗರ ತಾಲೂಕಿನ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಾನ್‌ಬೈಲ್‌ನ ಮಂಜಿಕೆರೆ ಎಂಬಲ್ಲಿ ಬಂದು ನೆಲೆಸುತ್ತಾರೆ. ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದ ಕರಿಯರವರು ಅಲ್ಲಿಂದ ಭೋಗ್ಯದ ಆಧಾರದಲ್ಲಿ ಭತ್ತದ ಗದ್ದೆಯನ್ನು ಪಡೆದುಕೊಂಡು ಭತ್ತ ಬೆಳೆಯುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. 

ದಿನಗಳು ಉರುಳಿದಂತೆ ಒಂದು ದಿನ ಗದ್ದೆ ಕೆಲಸವನ್ನು ಮುಗಿಸಿ ರಾತ್ರಿ 12 ಗಂಟೆಯ ಸಮಯಕ್ಕೆ ತಮ್ಮ ಮನೆಯ ಕಡೆ ಕಾಫಿ ತೋಟದ ಮೂಲಕ ಬರುತ್ತಿದ್ದ ಸಂದರ್ಭ ಮೂರು ದಾರಿ ಸೇರುವ ಬದಿ ಕತ್ತಲಲ್ಲಿ ಹೊಳೆಯುತ್ತಿರುವ ಕಲ್ಲೊಂದು ಹೊಳೆಯುತ್ತಾ ಕರಿಯರವರ ಕಣ್ಣಿಗೆ  ಗೊಚರಿಸುತ್ತದೆ. ಅದನ್ನು ಬಿಟ್ಟು ಮುಂದೆ ಹೋಗುವಾಗ ಮತ್ತೆ ಅಡ್ಡದಾರಿಯಲ್ಲಿ ಅದೇ ಕಲ್ಲು ಗೋಚರಿಸುತ್ತದೆ. ಅದನ್ನು ಬಿಟ್ಟು ಮುಂದೆ ಹೋಗುವಾಗ ದಾರಿಬದಿಯಲ್ಲಿ ಮತ್ತೆ ಕಾಣಲು ಸಿಗುತ್ತದೆ. ಆವಾಗ ಕರಿಯನವರು ಈ ಕಲ್ಲು ಮೂರು ಸಲ ಪದೇ ಪದೇ ಕಾಣಲು ಸಿಗುತ್ತದೆ., ಇದು ಸತ್ಯದ ಕಲ್ಲೆಂದು ಆ ಕಲ್ಲನ್ನು ಮನೆಗೆ ತಂದು ವೀಳ್ಯದೆಲೆ, ಅಡಿಕೆ, ಅಗರಬತ್ತಿ ಇಟ್ಟು ಕೈಮುಗಿದು ಮಲಗುತ್ತಾರೆ. ಸರಿ ಸುಮಾರು ಅದೇ ರಾತ್ರಿ ಎರಡೂವರೆ ಮೂರು ಗಂಟೆಗೆ ಗಗ್ಗರ ಮತ್ತು ದಂಟೆಯ ಶಬ್ದ ಕರಿಯನವರಿಗೆ ಕೇಳಿಸುತ್ತದೆ. ಆವಾಗದಿಂದ ಕರಿಯನವರು ಇದು ಕೊರಗಜ್ಜನ ಕಲ್ಲು ಕೊರಗಜ್ಜ ನನ್ನನ್ನು ಹಿಂಬಾಳಿಸಿ ಬಂದಿದ್ದಾರೆ. ಅವರನ್ನು ನಂಬ ಬೇಕು ಎಂದು ಕರಿಯನವರು ತಿರ್ಮಾನಿಸುತ್ತಾರೆ. ಈ ಘಟನೆಯೆಲ್ಲವು ನಡೆದದ್ದು ಸರಿ ಸುಮಾರು 50 ವರ್ಷಗಳ ಹಿಂದೆ.

ಅಂದು ಕರಿಯನವರಿಗೆ ದೊರೆತ ಆ ದೈವಿಕ ಶಿಲೆಯೇ ಕೊರಗಜ್ಜನ ಪ್ರತೀಕವಾಗಿ ಇಲ್ಲಿಯವರಗೆ ಇಲ್ಲಿ ಆರಾಧಿಸಲ್ಲಡುತ್ತಾ ಬಂದಿದೆ. ಕಳೆದ 5 ವರ್ಷಗಳ ಹಿಂದೆ ಸ್ಥಳೀಯ ಗ್ರಾಮಸ್ಥರೊಡಗೂಡಿ ಪ್ರಶ್ನೆ ಇಟ್ಟ ಸಂದರ್ಭ ಇಲ್ಲಿ ಕೊರಗಜ್ಜನ ಕೋಲವನ್ನು ಕಟ್ಟಿ ದೈವಾರಾಧನೆಯನ್ನು ಪ್ರತಿ ವರ್ಷ ನಡೆಸಿಕೊಂಡು ಬರುವಂತೆ ತಿಳಿಸಲಾಯಿತು. ಅಲ್ಲಿಂದ ಕಳೆದ 4 ವರ್ಷಗಳಿಂದ ವರ್ಷಂಪ್ರತಿ  ದೈವ ಕೋಲವು ನಡೆದುಕೊಂಡು ಬರುತ್ತಿದೆ.  ಈ ಪ್ರದೇಶದಲ್ಲಿ ಕೊರಗಜ್ಜನ ದೈವಸ್ಥಾನವು ನಿರ್ಮಾಣಗೊಂಡು 2022ರ ಜನವರಿ 22 ರಂದು ಬ್ರಹ್ಮಕಲಶೋತ್ಸವಾಯಿತು. ದೇವಾಲಯ ನಿರ್ಮಾಣಕ್ಕೆ ಸ್ಥಳಿಯ ಪನ್ಯ ಎಸ್ಟೇಟ್‌ ಮಾಲೀಕರಾದ ಎಸ್.ಪಿ. ಗಣೇಶರವರು ಜಾಗವನ್ನು ದಾನದ ರೂಪದಲ್ಲಿ ನೀಡಿ ದೈವ ಕೃಪೆಗೆ ಪಾತ್ರರಾಗಿದ್ದಾರೆ.

ಕಾನ್‌ಬೈಲ್‌ನ ಮಂಜಿಕೆರೆ ಕೊರಗಜ್ಜನ ದರ್ಶನ ಪಡೆಯುವುದಕ್ಕಾಗಿ  ಜನರು ದೂರದ ಊರುಗಳಿಂದ ಬರುತ್ತಾರೆ. ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೊರಗಜ್ಜನನ್ನು ಪ್ರಾರ್ಥಿಸಿ, ಹರಕೆಯನ್ನು ಕಟ್ಟಿಕೊಳ್ಳುವ ಸಂಪ್ರದಾಯವಿದೆ. 

ಸ್ವಾಮಿ ಕೊರಗಜ್ಜನ ದಿನ: ಶನಿವಾರ

ಸ್ವಾಮಿ ಕೊರಗಜ್ಜನ ಪ್ರಧಾನ ದೈವಗಳು: 1. ಪಂಜಂದಾಯ, 2. ಬಂಟ, 3. ವೈದ್ಯನಾಥ

ಕೊರಗ್ಗಜ್ಜನ ಆದಿ ಸ್ಥಳ ಕುತ್ತಾರು ಮಂಗಳೂರಿನ  ಮುಖ್ಯ ಕೋಲ ಕಟ್ಟುವ ವ್ಯಕ್ತಿಯೇ  ಮಂಜಿಕೆರೆ ಕೊರಗಜ್ಜ ದೈವಸ್ಥಾನದಲ್ಲಿ ಕೋಲ ಕಟ್ಟುವುದು.

ಕೊರಗಜ್ಜ ಸಮಾನತೆ ಸಾರುವ ದೈವ:

ತುಳುನಾಡಿನ ಮಟ್ಟಿಗೆ ಆ ಹೆಸರೇ ಒಂದು ಕಾರ್ಣಿಕ ಶಕ್ತಿ. ಭಕ್ತಿಯಿಂದ ಆ ಹೆಸರು ಕೂಗಿದರೆ ಎಂಥಾ ಸಂಕಷ್ಟಕ್ಕೂ ಕ್ಷಣಾರ್ಧದಲ್ಲಿ ಪರಿಹಾರ ಸಿಕ್ಕ ಉದಾಹರಣೆಯಿದೆ. ಅದರಲ್ಲೂ ಎಷ್ಟೇ ಬೆಳೆಬಾಳುವ ವಸ್ತುಗಳು ಕಳೆದು ಹೋದರೂ ದಿಕ್ಕೇ ತೋಚದ ಲಕ್ಷಾಂತರ ಜನ ಮೊದಲು ಕರೆಯುವುದೇ ಆ ದೈವದ ಹೆಸರು. ಶತಶತಮಾನಗಳಿಂದಲೂ ತುಳುನಾಡಿನಲ್ಲಿ ದೈವೀ ಶಕ್ತಿಯ ದರ್ಶನ ಮಾಡಿಸುತ್ತಿರುವ ಆ ನಂಬಿಕೆಯ ದೈವವೇ ಸ್ವಾಮಿ ಕೊರಗಜ್ಜ.

ಕೊರಗಜ್ಜ ಸಮಾನತೆ ಸಾರುವ ದೈವವಾಗಿ ಎಲ್ಲ ಜಾತಿ ಹಾಗೂ ಧರ್ಮದ ಜನರು ಅಜ್ಜ ಎಂದು ನಂಬಿಕೊಂಡು ಬಂದಿದ್ದಾರೆ. ಸಾಮಾಜಿಕ ನ್ಯಾಯದ ಪ್ರತೀಕವಾಗಿ ಆರಾಧಿಸುವ ಕೊರಗಜ್ಜನನ್ನು ತುಳುನಾಡಿನ ಪ್ರತಿಯೊಂದು ಜಾತಿ ಧರ್ಮದ ಜನರು ನಂಬಿಕೊಂಡು ಬಂದಿದ್ದಾರೆ. ತುಳುನಾಡಿನ ದೈವರಾಧನೆಯ ಒಂದು ಭಾಗವಾಗಿ ಕೊರಗಜ್ಜನ ಆರಾಧನೆಯನ್ನು ಮಾಡಲಾಗುತ್ತದೆ. ಕೊರಗಜ್ಜನ ಮೂಲಸ್ಥಾನ ಕುತ್ತಾರಿನಲ್ಲಿದ್ದರೂ ಕೂಡ ಅವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ  ಹಾಗೂ ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನಂಬಲಾಗುತ್ತಿದ್ದು, ಆಚರಣೆಗಳು ಮಾತ್ರ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿದೆ.

ಮಾನವನ ರೂಪದಲ್ಲಿ ಇದ್ದ ಕೊರಗತನಿಯ ಮಾಯಾ ರೂಪವನ್ನು ಪಡೆದು ದೈವೀ ಪುರುಷನಾಗುತ್ತಾನೆ ಎಂಬ ಪ್ರತೀತಿ ಇದೆ. ಹಾಗಾಗಿ ಮನುಷ್ಯರು ತಿನ್ನುವ ವಸ್ತುಗಳನ್ನೇ ಹರಕೆಯ ರೂಪದಲ್ಲಿ ಅಜ್ಜನಿಗೆ ನೀಡಲಾಗುತ್ತದೆ. ಉದಾಹರಣೆಗೆ ವೀಳ್ಯದೆಲೆ, ಅಡಿಕೆ ಸುಣ್ಣ,‌ ಶೇಂದಿ, ಚಕ್ಕುಲಿ, ಮದ್ಯ ಹೆಚ್ಚಾಗಿ ಹರಕೆಯಾಗಿ ನೀಡಲಾಗುತ್ತದೆ. ಅಮೂಲ್ಯವಾದ ಅಥವಾ ಯಾವುದೇ ಸಣ್ಣ ವಸ್ತು ಕಳೆದು ಹೋದರೂ ಅಜ್ಜನನ್ನು ಮನಸ್ಸಿನಲ್ಲಿ ನೆನೆದು ಹರಕೆಯನ್ನು ಹೇಳಿದರೆ ಸಾಕು ಆ ವಸ್ತು ಮತ್ತೆ ಕೈ ಸೇರಿದ ಅನೇಕ ಉದಾಹರಣೆಗಳು ಇದೆ ಎಂಬ ಬಲವಾದ ನಂಬಿಕೆ ಇಂದಿಗೂ ಕೂಡ ತುಳುನಾಡಿನ ಜನರಲ್ಲಿ ಇದೆ. ಯಾವುದರಲ್ಲೂ ಭಕ್ತಿ ಮುಖ್ಯವಾಗಿ ಬೇಕಾಗುತ್ತದೆ. ಯಾವುದೇ ಜಾಗದಲ್ಲಿ ನಿಂತು ಮನಸಾರೆ `ಅಜ್ಜ’ ಎಂದು ಕರೆದರೆ ನಾವಿದ್ದ ಜಾಗಕ್ಕೆ ಅಜ್ಜ ಬರುತ್ತಾನೆ ಎಂಬುವುದು ಭಕ್ತರ ನಂಬಿಕೆ.

ಕೊರಗಜ್ಜನ ದರ್ಶನ ಪಡೆಯುವುದಕ್ಕಾಗಿ  ಜನರು ದೂರದ ಊರುಗಳಿಂದ ಬರುತ್ತಾರೆ. ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೊರಗಜ್ಜನನ್ನು ಪ್ರಾರ್ಥಿಸಿ, ಹರಕೆಯನ್ನು ಕಟ್ಟಿಕೊಳ್ಳುವ ಸಂಪ್ರದಾಯವಿದೆ. 

ಸ್ವಾಮಿ ಕೊರಗಜ್ಜ ದೈವದ ಸೇವೆಗಳು


ಹಣ್ಣುಕಾಯಿ ಸೇವೆ (ತೆಂಗಿನ ಕಾಯಿ, ಬಾಳೆ ಹಣ್ಣು)

ಅಮೃತ ಸೇವೆ (ಕಾರ ಬೀಡ, ವೀಳ್ಯದೆಲೆ, ಅಡಿಕೆ, ಚಕ್ಕುಲಿ, ಮದ್ಯ, ಶೇಂದಿ)

ಅಗೇಲು ಸೇವೆ (ಎಡೆ - ಕೋಳಿ, ಮೀನು, ಬಸಳೆ)

ಗಗ್ಗರ ಸೇವೆ ( ಕೋಲ - ನರ್ತನ ಸೇವೆ)

ಇನ್ನಿತ್ತರ ಸೇವೆಗಳು

ಉತ್ಸವಗಳು

ತಿಂಗಳ ಪೂಜೆ: ಸಂಕ್ರಮಣ ಪೂಜೆ

ವಾರ್ಷಿಕ ಪೂಜೆ: ಗಗ್ಗರ ಸೇವೆ ( ಕೋಲ - ನರ್ತನ ಸೇವೆ)

ವಾರ್ಷಿಕ ಉತ್ಸವ

ಪೂಜಾ ಸಮಯ


ಪ್ರತಿ ನಿತ್ಯ :  ಬೆಳ್ಳಿಗೆ 8.00 ಗಂಟೆಯಿಂದ ರಾತ್ರಿ 9.00 ಗಂಟೆಯವರಗೆ

ವ್ಯವಸ್ಥಾಪನ ಸಮಿತಿ


ದೈವಸ್ಥಾನದ ಮುಖ್ಯಸ್ಥ: ತಿಮ್ಮಪ್ಪ
ಮೊ: 8971878995

ದೈವಸ್ಥಾನದ ಪೂಜಾರಿ: ಮಹೇಶ್
ಮೊ: 8762304217

ಗುರು ಹಿರಿಯರು

‌ದಿವಂಗತ ಕರಿಯ ಮೊಗೇರ  ಕುಟುಂಬಸ್ಥರು 

ಗ್ರಾಮಸ್ಥರು

ದೇಣಿಗೆ


ಅಕೌಂಟ್‌ ಡಿಟೈಲ್ಸ್:‌

ಹೆಸರು: ಮಹೇಶ್‌ . ಎಂ.ಎ.

ಬ್ಯಾಂಕ್: ಕರ್ನಾಟಕ  ಬ್ಯಾಂಕ್, ಸುಂಟಿಕೊಪ್ಪ ಶಾಖೆ.

ಅಕೌಂಟ್ ನಂಬರ್:  7112500102617101

IFSE CODE: KARB0000711

ಸಂಪರ್ಕ


ಶ್ರೀ ಕೊರಗಜ್ಜ ದೈವಸ್ಥಾನ‌, ಮಂಜಿಕೆರೆ,  ಸುಂಟಿಕೊಪ್ಪ,

ಕಾನ್‌ಬೈಲ್ ಅಂಚೆ, 

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿ,

ಕುಶಾಲನಗರ ತಾಲ್ಲೂಕು

ಕೊಡಗು.

ದೈವಸ್ಥಾನದ ಪೂಜಾರಿ: ಮಹೇಶ್

ಮೊ: 8762304217


Search Coorg Media

Coorg's Largest Online Media Network

"ಸರ್ಚ್‌ ಕೂರ್ಗ್‌ ಮೀಡಿಯಾ"

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.